ದಾಂಡೇಲಿ : ಜೂನ್:7 ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿಪಾಲನಾ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕ ಜೈಪಾಲ್ ಪಾಟೀಲ್ ಅವರು ದಾಂಡೇಲಿಯ ಜನ ಶಾಂತಿ, ಸೌಹಾರ್ದತೆಗೆ ವಿಶೇಷವಾದ ಒತ್ತನ್ನು ಕೊಡುತ್ತಿರುವುದು ಶ್ಲಾಘನೀಯ. ಪೊಲೀಸ್ ಇಲಾಖೆಯೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಇಲ್ಲಿನ ಜನತೆ ಇಟ್ಟುಕೊಂಡಿದ್ದಾರೆ. ಬರಲಿರುವ ಬಕ್ರೀದ್ ಹಬ್ಬವನ್ನು ಅತ್ಯಂತ ಶಿಸ್ತು ಬದ್ದವಾಗಿ ಮತ್ತು ಶಾಂತಿ, ಸೌಹಾರ್ದತೆಯಿಂದ ಆಚರಿಸುವಂತೆ ವಿನಂತಿಸಿದರು. ಬಕ್ರೀದ್ ಹಬ್ಬದ ದಿನದಂದು ಯಾವುದೇ ರೀತಿಯ ಪ್ರಾಣಿವಧೆಯನ್ನು ಮಾಡಬಾರದು. ಬಕ್ರೀದ್ ಹಬ್ಬದಂದು ಪ್ರಾರ್ಥನೆಗೆ ತೆರಳುವ ಮಾರ್ಗದಲ್ಲಿ ಅನ್ಯಕೋಮಿನ ವಿರುದ್ಧ ಯಾವುದೇ ಘೋಷಣೆಗಳನ್ನು ಕೂಗಬಾರದು. ಪ್ರಾರ್ಥನೆಗೆ ತೆರಳುವ ಸಮಯದಲ್ಲಿ ಬೈಕ್ ಹಾಗೂ ಇನ್ನಿತರ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಸುವಂತಿಲ್ಲ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಬೇಕು. ಬಕ್ರೀದ್ ಹಬ್ಬದ ನಂತರ ಯಾವುದೇ ನದಿ ದಂಡೆ ಅಥವಾ ಪ್ರವಾಸಿ ತಾಣಗಳಿಗೆ ಹೋದ ಸಂದರ್ಭದಲ್ಲಿ ಸೂಕ್ತ ಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು. ನಗರದಲ್ಲಿ ಶಾಂತಿ ಕಾಪಾಡಲು ಇಲಾಖೆಯೊಂದಿಗೆ ನಗರದ ನಾಗರೀಕರು ಕೈ ಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ನಗರದ ಜನತೆ ಮುಕ್ತವಾಗಿ ಸಂಪರ್ಕಿಸಬಹುದೆಂದು ಹೇಳಿದರು.
ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರು ದಾಂಡೇಲಿ ನಗರ ಸರ್ವಧರ್ಮ ಸಮನ್ವಯತೆ ನಗರ. ಇಲ್ಲಿ ನಾವು ಎಲ್ಲ ಧರ್ಮೀಯರು ಪರಸ್ಪರ ಭಾತೃತ್ವದಿಂದ ಹಬ್ಬ ಹರಿದಿನಗಳನ್ನು ಆಚರಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಬಕ್ರಿದ್ ಹಬ್ಬವನ್ನು ಪರಸ್ಪರ ಸೌಹಾರ್ದತೆಯಿಂದ ಆಚರಿಸಿಕೊಳ್ಳೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ನಗರ ಹಾಗೂ ಗ್ರಾಮೀಣ ಠಾಣೆಯ ಪಿಎಸ್ಐಗಳಾದ ಅಮೀನ್ ಅತ್ತಾರ್, ಕಿರಣ್ ಪಾಟೀಲ್, ಶಿವಾನಂದ ನಾವದಗಿ, ಜಗದೀಶ್ ಮತ್ತು ನಗರಸಭೆಯ ವ್ಯವಸ್ಥಾಪಕ ಪರಶುರಾಮ ಶಿಂದೆ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ನಗರಸಭಾ ಸದಸ್ಯರು, ನಗರ ಹಾಗೂ ಗ್ರಾಮೀಣ ಬಾಗದ ಮುಸ್ಲಿಂ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮತ್ತು ವಿವಿಧ ಸಮಾಜಗಳ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದು ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ವ್ಯಕ್ತಪಡಿಸಿದರು.